ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ಮೂರ್ಖ ಮೊಸಳೆ

ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದು ಮುದಿ ಯಾಗುತ್ತಾ ಬಂದುದರಿಂದ ಪ್ರಾಣಿಗಳನ್ನು ಬೇಟೆ ಅಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅದು ನರಿಯನ್ನು ಕರೆದು, ``ನರಿರಾಯ, ನೀನು ಇನ್ನು ಮೇಲೆ ನನ್ನ ಮಂತ್ರಿ. ನಿನ್ನ ಕೆಲಸವೆಂದರೆ ನಂಗೆ ದಿನಕ್ಕೊಂದು ಪ್ರಾಣೀನ ಆಹಾರವಾಗಿ ತಂದು ಕೊಡೋದು" ಎಂದಿತು. ಅಳಿದುಳಿದ ಮಾಂಸ ತನಗೆ ಸಿಗುವುದೆಂಬ ಆಶೆಯಿಂದ ನರಿ ``ಆಗಲಿ"ಎಂದಿತು

ನದೀತೀರದ ಮರಳಿನ ಮೇಲೆ ಮೊಸಳೆ ಬಿಸಿಲಿಗೆ ಮೈ ಕಾಯಿಸಿ ಕೊಳ್ಳುತ್ತಾ ಮಲಗಿತ್ತು. ನರಿ ಪ್ರಾಣಿಯನ್ನು ಹುಡುಕಿಕೊಂಡು ಕಾಡಿನೊಳಗೆ ಹೋಯಿತು. ಅದರ ಎದುರಿಗೆ ಮೊಲವೊಂದು ಸಿಕ್ಕಿದಾಗ ನರಿ, ``ಮೊಲರಾಯ, ಮೊಸಳೆ ನಿನ್ನ ಹತ್ತಿರ ಮಾತಾಡಬೇಕಂತೆ. ಬಾ"ಎಂದು ಕರೆಯಿತು. ಇದರಲ್ಲೇನೋ ಮೋಸವಿದೆಯೆಂದು ತಿಳಿದ ಮೊಲ, ``ಮೊಸಳೇನ ಕಂಡ್ರೆ ನಂಗೆ ಹೆದರಿಕೆಯಪ್ಪ ನಾನು ಬರೋಲ್ಲ"ಎಂದು ದೂರದಿಂದಲೇ ಹೇಳಿತು.

ಮರುದಿನ ನರಿ ಒಂದು ಉಪಾಯ ಯೋಚಿಸಿತು. ಮೊಸಳೆಯನ್ನು ಮರವೊಂದರ ಕೆಳಗೆ ಮಲಗಿಸಿ ಅದರ ಮೇಲೆ ಕಾಡಿನ ಹೂಗಳನ್ನು ಹಾಕಿ ``ಮೊಲ ಬಂದಾಗ ನೀನು ಅಲುಗಾಡದೆ ಸತ್ತ ಹಾಗೆ ಮಲಕ್ಕೊಂಡಿರು. ಅದು ಹತ್ತಿರ ಬಂದಾಗ ಗಬಕ್ಕನೆ ತಿನ್ನು"ಎಂದು ಬೋಧಿಸಿತು. ಮೊಸಳೆ ಸಂತೋಷದಿಂದ ಒಪ್ಪಿಕೊಂಡಿತು.

ನರಿ ಮೊಲದ ಬಳಿಗೆ ಹೋಗಿ, ``ಮೊಲರಾಯಾ, ನನ್ನ ರಾಜ ಮೊಸಳೆ ಸತ್ತು ಹೋಯ್ತು ಈಗಲಾದರೂ ಅದನ್ನು ಬಂದು ನೋಡು"ಎಂದು ಕಣ್ಣೀರು ಸುರಿಸುತ್ತಾ ಹೇಳಿತು. ಮೊಲ ಅದನ್ನು ನಿಜವೆಂದು ನಂಬಿ, ನರಿಯ ಜೊತೆಗೆ ತುಸು ದೂರ ಬಂದು ದೂರದಿಂದಲೇ ಮರದ ಕೆಳಗೆ ಮಲಗಿದ್ದ ಮೊಸಳೆಯನ್ನು ದಿಟ್ಟಿಸಿತು. ಅನಂತರ ಕೇಳಿತು: ``ನರಿರಾಯ, ನೀನು ಹೇಳೋದೆಲ್ಲ ಸರಿಯೇ ಆದ್ರೆ ನಮ್ಮ ಪೂರ್ವಿಕರು ಹೇಳುತ್ತಿದ್ದರು, ಸತ್ತ ಮೊಸಳೆಗಳು ಬಾಲ ಅಲ್ಲಾಡಿಸ್ತಾ ಇರ್ತವೆ ಅಂತ. ಈ ಮೊಸಳೆ ಸುಮ್ಮನೆ ಮಲಕ್ಕೊಂಡಿದೆಯಲ್ಲಾ" ಮೊಲ ಅಷ್ಟು ಹೇಳಿದ್ದೇ ತಡ, ಮೊಸಳೆ ತನ್ನ ಬಾಲವನ್ನು ಎತ್ತಿ ಆಡಿಸಲಾರಂಭಿಸಿತು. ನಿಜ ಸ್ಥಿತಿ ಗೊತ್ತಾದ ಮೊಲ ಕಾಡಿನೊಳಗೆ ಓಟಕಿತ್ತಿತು.

``ನಿನ್ನಮೂರ್ಖತನದಿಂದ ನನ್ನ ಶ್ರಮವೆಲ್ಲಾ ನೀರು ಪಾಲಾಯ್ತು"ಎಂದು ಮೊಸಳೆಯನ್ನು ಶಪಿಸಿತು.