ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ಸೀತಾ ಪರಿಣಯ

ಮಿಥಿಲಾ ನಗರಿಯಲ್ಲಿ ಜನಕನೆಂಬ ಮಹಾರಾಜ ರಾಜ್ಯಭಾರ ಮಾಡುತ್ತಿದ್ದ. ಅವನಿಗೆ ಸೀತೆಯೆಂಬ ಮಗಳಿದ್ದಳು. ಅವಳು ಭುವನ ಮೋಹನಸುಂದರಿಯೂ ಗುಣವಂತೆಯೂ ಆಗಿದ್ದಳು. ಅವಳನ್ನು ಮದುವೆಯಾಗಲು ಭೂಲೋಕದ ಎಲ್ಲ ರಾಜಕುಮಾರರಿಗೂ ಆಸೆಯಿತ್ತು. ಆದರೆ ಜನಕನು, ``ನನ್ನಲ್ಲಿರೋ ಶಿವಧನುಸ್ಸನ್ನು ಯಾರು ಬಗ್ಗಿಸಿ ಎದೆ ಎರಿಸ್ತಾರೋ ಅವರ್ಗೇ ಸೀತೇನ ಕೊಟ್ಟು ಮದುವೆ ಮಾಡ್ತೀನಿ"ಎಂದು ಸಾರಿದ್ದ.

ದೇಶದ ಎಲ್ಲ ಕಡೆಗಳಿಂದಲೂ ರಾಜಕುಮಾರರು ಬಂದು ಬಿಲ್ಲನ್ನು ಬಗ್ಗಿಸಲು ಪ್ರಯತ್ನಪಟ್ಟರು. ಅನೇಕರಿಗೆ ಅದನ್ನು ಮೇಲೆ ಎತ್ತಲೂ ಆಗಲಿಲ್ಲ. ಅವರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸಿ ಹೊರಟು ಹೋದರು. ಲಂಕಾಧೀಶನಾದ ರಾವಣಾಸುರನೂ ಧನುಸ್ಸುನ್ನು ಎತ್ತಲು ಹೋಗಿ ಅದನ್ನು ಎತ್ತಲಾರದೆ ಕೆಳಗೆ ಹಾಕಿ ಕೊಂಡು ಬಿದ್ದ. ಅವನೂ ಅವಮಾನಿತನಾಗಿ ತನ್ನ ರಾಜ್ಯಕ್ಕೆ ಹಿಂತಿರುಗಿದ.

ಇತ್ತ ಅಯೋಧ್ಯಾ ನಗರಿಯಲ್ಲಿ ದಶರಥನೆಂಬ ರಾಜನಿದ್ದ. ಅವನಿಗೆ ರಾಮಲಕ್ಷ್ಮಣರೆಂಬ ವೀರಪುತ್ರರಿದ್ದರು. ಅವರಿಗೆ ಸರಿಯಾದ ಶಿಕ್ಷಣ ಕೊಡಲೆಂದು ರಾಜಗುರು ವಿಶ್ವಾಮಿತ್ರ ರಾಮ ಲಕ್ಷ್ಮಣರನ್ನು ಕಾಡಿಗೆ ಕರೆದೊಯ್ದ. ಆಗ ಸೀತೆಯ ವಿವಾಹದ ವಾರ್ತೆ ಅವರ ಕಿವಿಗೆ ಬಿತ್ತು. ವಿಶ್ವಾಮಿತ್ರನು ``ರಾಮ, ನಾವೀಗ ಮಿಥಿಲೆಗೆ ಹೋಗೋಣ. ನೀನು ಶಿವಧನುಸ್ಸನ್ನು ಬಗ್ಗಿಸಬಲ್ಲೆ"ಎಂದ

ಹಾಗೆ ರಾಮ ಲಕ್ಷ್ಮಣರೂ ವಿಶ್ವಾಮಿತ್ರನೂ ಮಿಥಿಲೆಗೆ ಬಂದರು. ವಿಶ್ವಾಮಿತ್ರನು:

``ಜನಕ ಮಹಾರಾಜ, ಇವನು ದಶರಥನ ಪುತ್ರ ರಾಮ. ನಿನ್ನ ಶಿವಧನುಸ್ಸನ್ನು ತೋರು. ರಾಮನೂ ತನ್ನ ಶಕ್ತಿಯ ಪರೀಕ್ಷೆ ಮಾಡ್ಲಿ"ಎಂದ.

ಶಿವಧನುಸ್ಸನ್ನು ಎಂಟು ಚಕ್ರದ ರಥದಲ್ಲಿರಿಸಿಕೊಂಡು ರಾಜ ಭಟರು ಅಲ್ಲಿಗೆ ತಂದರು. ರಾಮ ತನ್ನ ಗುರುಗಳನ್ನೂ ಇಷ್ಟದೈವವನ್ನೂ ಪ್ರಾರ್ಥನೆ ಮಾಡಿದ. ಮುಂದೆ ನಡೆದು ಶಿವಧನುಸ್ಸನ್ನು ಲೀಲಾಜಾಲವಾಗಿ ಮೇಲೆತ್ತಿದ. ಹೆಮ್ಮೆಯಿಂದ ಬಿಲ್ಲಿಗೆ ಎದೆ ಎರಿಸಿದ. ಧನುಸ್ಸು ಭಯಂಕರ ಶಬ್ದಮಾಡುತ್ತಾ ಎರಡು ಭಾಗಗಳಾಗಿ ಮುರಿಯಿತು.

ಅಲ್ಲಿದ್ದವರೆಲ್ಲಾ ಜಯಕಾರ ಮಾಡಿದರು. ಸೀತೆ ಹೂಮಾಲೆಯನ್ನು ತಂದು ರಾಮನ ಕೊರಳಿಗೆ ಹಾಕಿದಳು. ಆಗ ಜನಕನೆಂದ: ``ನನ್ನ ಕಣ್ಣುಗಳು ಇವತ್ತು ಅಪೂರ್ವ ದೃಶ್ಯವನ್ನು ನೋಡಿದ್ವು. ವೀರಾಗ್ರಣಿ ರಾಮ ಯಾರೂ ಕಂಡು ಕೇಳಿಲ್ಲದ ಶೌರ್ಯವನ್ನು ನೀನು ತೋರಿಸ್ದೆ. ರಾಜಗುರು ವಿಶ್ವಾಮಿತ್ರ, ದಯವಿಟ್ಟು ದಶರಥನಿಗೆ ನಮ್ಮ ಅಭಿನಂದನೆಗಳನ್ನು ತಿಳಿಸಿ. ಆತನನ್ನೂ ಇಲ್ಲಿಗೇ ಕರೆತರೋದಕ್ಕೆ ದೂತರನ್ನು ಕಳಿಸಿ. ಸೀತಾರಾಮರ ವಿವಾಹಕ್ಕೆ ಭೂಲೋಕದ ರಾಜರುಗಳನ್ನೆಲ್ಲಾ ಆಹ್ವಾನಿಸೋಣ."

ದಶರಥ ಮಹಾರಾಜ ತನ್ನ ಇತರ ಮಕ್ಕಳಾದ ಭರತ, ಶತ್ರುಘ್ನರೊಂದಿಗೆ ಮಿಥಿಲೆಗೆ ಬಂದ. ಸೀತಾ-ರಾಮರ ವಿವಾಹದ ಜೊತೆಗೆ ಲಕ್ಷ್ಮಣ-ಊರ್ಮಿಳೆಯರಿಗೂ, ಭರತ-ಮಾಂಡವಿಯರಿಗೂ, ಶತ್ರುಘ್ನ-ಶ್ರುತಕೀರ್ತಿಯರಿಗೂ ಮದುವೆ ವೈಭವದಿಂದ ನಡೆಯಿತು.

ಅಂಥ ಅದ್ಧೂರಿಯ ವಿವಾಹ ಆಮೇಲೆ ನಡೆದಿಲ್ಲ ಎಂದು ಕಂಡವರು ಹೇಳುತ್ತಾರೆ.