ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ಇರುವೆ ಮತ್ತು ಹಸಿರು ಮಿಡತೆ

ಆಗ ಬೇಸಿಗೆ ಕಾಲ. ಸೂರ್ಯ ಆಕಾಶದಲ್ಲಿ ಪ್ರಜ್ವಲಿಸುತ್ತಿದ್ದ. ಗಿಡಮರಗಳಲ್ಲಿ ನೂರಾರು ಬಣ್ಣದ ಹೂಗಳು ಅರಳಿದ್ದುವು. ಹಸಿರು ಮಿಡತೆ ಒಂದು ಗಿಡದಿಂದ ಇನ್ನೊಂದಕ್ಕೆ ಕುಪ್ಪಳಿಸುತ್ತಾ ಸಂತೋಷವಾಗಿ ಕಾಲ ಕಳೆಯುತ್ತಿತ್ತು.

ಆಗ ಕಾಳು ಕಚ್ಚಿಕೊಂಡು ನೆಲದಲ್ಲಿ ಹೋಗುತ್ತಿದ್ದ ಇರುವೆಯನ್ನು ಕಂಡು ಹಸಿರು ಮಿಡತೆ ಹೇಳಿತು: ``ಇರುವೆ ಇಷ್ಟು ಸೊಗಸಾಗಿರೋವಾಗ ಯಾಕೆ ಕಷ್ಟಪಡುತ್ತೀ ಇರುವೇ? ಬಾ ನನ್ನ ಜೊತೆಗೆ ಕುಣಿದು ಕುಪ್ಪಳಿಸೋಣ"

ಇರುವೆ ಗಂಭೀರವಾಗಿ ``ನಾನು ಬರುವುದಿಲ್ಲ ಮಿಡತೆ. ಮಳೆಗಾಲಕ್ಕಾಗಿ ಆಹಾರ ಕೂಡಿಡ್ಬೇಕು"ಎಂದಿತು

ಮಿಡತೆ ಇರುವೆಯನ್ನು ಪರಿಹಾಸ್ಯ ಮಾಡಿ ನಕ್ಕಿತು.

ಬೇಸಿಗೆ ಕಳೆದು ಮಳೆಗಾಲ ಕಾಲಿರಿಸಿತು. ಮಿಡತೆಗೆ ಎಲ್ಲಿ ಹುಡುಕಿದರೂ ಆಹಾರ ಸಿಗಲಿಲ್ಲ. ಉಪವಾಸದಿಂದ ಕಂಗೆಟ್ಟ ಮಿಡತೆ ಇರುವೆಯ ಮನೆಯ ಹತ್ತಿರ ಬಂದು, ``ಇರುವೆರಾಯಾ, ನೀನು ಆಹಾರ ಕೂಡಿಟ್ಟಿದೀಯಲ್ಲ, ನನಗಿಷ್ಟು ಕೊಡ್ತೀಯಾ?" ಎಂದು ಕೇಳಿತು. ``ಬೇಸಿಗೆಯಲ್ಲಿ ಆಹಾರ ಕೂಡಿಟ್ಟುಕೊಳ್ಳದೆ ನೀನು ಏನು ಮಾಡ್ತಿದ್ದೆ?"ಎಂದು ಇರುವೆ ಕೇಳಿತು.

``ಆಟವಾಡೋದರಲ್ಲೇ ಕಾಲ ಕಳೆದೆ"ಎಂದಿತು ಮಿಡತೆ ನಾಚಿಕೆಯಿಂದ.

``ನಾನು ಆಟವಾಡೋದರಲ್ಲೇ ಕಾಲ ಕಳೆದಿದ್ರೆ ಮಳೆಗಾಲಕ್ಕೆ ನನ್ನ ಹತ್ತಿರವೂ ಆಹಾರ ಇರ್ತಾ ಇರಲಿಲ್ಲ. ನಾಳಿನ ಯೋಚನೆ ಮಾಡೋ ಶಕ್ತಿ ಇಲ್ಲದೋರಿಗೆ ನಾನು ಸಹಾಯ ಮಾಡೋದಿಲ್ಲ"ಎಂದು ಖಡಾಖಂಡಿತವಾಗಿ ಇರುವೆ ಹೇಳಿತು. ಮಳೆ ಸುರಿಯ ತೊಡಗಿತು. ಮಿಡತೆ ಸಪ್ಪೆಮುಖ ಹಾಕಿಕೊಂಡು ಮಳೆಯಲ್ಲಿ ನಡುಗುತ್ತಾ ಹೊರಟುಹೋಯಿತು.